ಹೀಗೊಂದು ಭಾವ ಚಿತ್ತ ಯಾನ

....

ಬುಧವಾರ, ಡಿಸೆಂಬರ್ 20, 2017

ಭಾವ ಚಿತ್ತ ೧


ಏನಬೇ ಅಡಿಗಿ ಗಿಡಗಿ ಮಾಡಿ ಇಲ್ಲೋ.
ಇಲ್ಲಾಂದ್ರ ಇವತ್ತೂ ನೀರ ಗತಿ ಅನ್ನು...?
ಈಗ ಬಂದೇನಪಾ..
ಮಾಡೀನಿ ಬಾ ಮಗನ...

ಹೌದಾ ಏನೇನ ಮಾಡಿ ಲಗುಲಗು ಹೇಳ್ ನೋಡೂನು ಅಂದಾಗ
ಅವನ ಅವ್ವ ಹೇಳಿದ್ದು ಹಿಂಗಿತ್ತು...

ನಿನ್ನ ಸಲುವಾಗಿ ನನ್ನ ಭಾವನೆಗೋಳನ್ನ ಹದಾಮಾಡಿ ಹಾಕಿ ತಿರುವಿ ಮುಂಜಾನಿಗೆ ಉಪ್ಪಿಟ ಮಾಡಿಟ್ಟೀನಪಾ...

ನಿಮ್ಮಪ್ಪ ದನದಂಗ ದುಡದ್ ತಂದ ಅವಮಾನಗೋಳನ್ನ ಸಣ್ಣ ಸಣ್ಣಕ ಹೆಚ್ಚಿ ಅದರ ಜೋಡಿ ನನ್ನ ಎರಡ್ಮಾತಿನ ಭರವಸೆಗೋಳನ್ನ ಹಾಕಿ ಸಾರ ಮಾಡಿಟ್ಟೀನಿ...

ಕೆಲಸಕ್ ಹೋದ ನಿನ್ನಕ್ಕ ಹೊತಗೊಂಡ್ ತಂದ ಕೇಳಲಾರದಂತ ಕೆಟ್ ಪದಗೋಳು, ದಾರಿತುಂಬ ಉಡಾಳ ಹುಡುಗೂರು ಕೊಟ್ಟ ಹೀಯಾಳಿಕೆಯ ಬಹುಮಾನಗೋಳು ಇವನ್ನೆಲ್ಲ ಜಜ್ಜಿ ಕುಟ್ಟಿ ತೇದು ಅರದು ಚಟ್ನಿ ಮಾಡೀನಿ...

ಮನಿ ಮನಿ ತಿರಗಿ, ಕೇಳಿ ತಂದಿಟ್ಟ ಬೈಗುಳಗೋಳನ್ನೆಲ್ಲ ಬಸದು, ನೆನಪಿನ ಒಲಿಮ್ಯಾಲಿಟ್ಟು, ನನ್ನ ಕಣ್ಣೀರನ್ನ ರುಚಿಗೆ ಬೇಕಾಗುವಷ್ಟು ಸುರಸಿ ಅನ್ನ ಮಾಡೀನಿ...

ಒಳಗಿನ ನೆನಪಗೋಳನ್ನ ಹೊರಗಿನ ಒಲಿಮ್ಯಾಗ ಹುರದು, ನೆಪದ ಮಸಾಲಿ ಹಾಕಿ ಘಮ ಘಮ ಅನ್ನುವಂಗ ಪಲ್ಲೆ ಮಾಡೀನಿ...

ಕಾಸಗಲದ ಆಶೆಗೋಳನ್ನ ಹೊಡದು ಹುಡಿಮಾಡಿ, ರುಬ್ಬಿ ಪುಡಿಮಾಡಿ, ಕಲ್ಲಾಗ ಹಾಕಿ ಹಿಟ್ಟಮಾಡಿ ಗಟ್ಟೆಂಗ ರೊಟ್ಟಿ ಮಾಡಿ ಅಟ್ಟದಮ್ಯಾಲ ಇಟ್ಟೀನಿ...

ಕುಂದರ ಬಾ ಮಗನ ಬಾಳೆ ಅನ್ನು ತಾಟಿನ್ಯಾಗ ಎಲ್ಲಾ ಜೋಡಿಸು, ಊಟಕ್ಕ ನೀಡ್ತೀನಿ, ಅಡಿಗ್ಯಾಗ ಸ್ವಲ್ಪ ಉಪ್ಪ ಹೆಚ್ಚಾದ್ರ ತಡಕೊಂಡ ತಿನ್ನಪಾ...
ಯಾಕಂದ್ರ ಇವತ್ತು ಎಂಟ್ ಹನಿ ಕಣ್ಣೀರು. ಮೂರ್ ಹನಿ ಬೆವರು ಜಾಸ್ತಿ ಆಗೆದ...

ಇದನ್ನ ಕೇಳಿದ ಮಗಾ ಸಪ್ಪಗ ಮಾರಿ ಮಾಡ್ಕೊಂಡ್ ಗಟಾಗಟಾ ಯಾಡ್ ವಾಟಗಾ ನೀರ್ ಕುಡದು ಮತ್ತ
ಗಪ್ಪ ಆಟಕ್ಕೋದಾ...!!!


ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ